ದಾಂಡೇಲಿ : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉತ್ತರ ಕನ್ನಡ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯ ಆಶ್ರಯದಡಿ ನಗರದ ಸಿವಿಲ್ ನ್ಯಾಯಾಲಯದಲ್ಲಿ ಮೆಗಾ ಲೋಕ್ ಅದಾಲತ್ ಮತ್ತು ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ರೋಹಿಣಿ ಡಿ. ಬಸಾಪುರ, ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಅವಲಂಬಿಯಾಗಿದ್ದ ಮಹಿಳೆ ಇಂದು ಸ್ವಾವಲಂಬಿಯಾಗಿ ಆರ್ಥಿಕವಾಗಿ ಸದೃಢರಾಗುತ್ತಿರುವುದು ಉತ್ತಮವಾದ ಬೆಳವಣಿಗೆ. ನಮ್ಮ ದೇಶದಲ್ಲಿ ಮಹಿಳೆಯರ ರಕ್ಷಣೆಗಾಗಿ ಉಪಯುಕ್ತ ಕಾನೂನುಗಳು ಇದೆ. ಮಹಿಳೆಯರು ಶೈಕ್ಷಣಿಕವಾಗಿ ಅಭಿವೃದ್ಧಿಯನ್ನು ಸಾಧಿಸಿದಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ. ಕಾನೂನಿನ ಸಾಮಾನ್ಯ ಅರಿವು ಪ್ರತಿಯೊಬ್ಬರಿಗೂ ಇರಬೇಕಾಗಿದೆ. ಈ ನಿಟ್ಟಿನಲ್ಲಿ ನಿರಂತರವಾಗಿ ಕಾನೂನು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ. ತ್ವರಿತ ಸೇವೆಗಾಗಿ ಮತ್ತು ಪರಸ್ಪರ ಬಾಂಧವ್ಯವನ್ನು ಬೆಸೆಯುವ ನಿಟ್ಟಿನಲ್ಲಿ ಮೆಗಾ ಲೋಕ್ ಅದಾಲತ್ ಅತ್ಯುತ್ತಮವಾದ ಕಾರ್ಯಕ್ರಮವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷರಾದ ಎಚ್.ಎಸ್.ಕುಲಕರ್ಣಿ, ಇಂದು ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಉದ್ದೇಶವೇ ಮಹಿಳೆಯರನ್ನು ಸಮಾನವಾಗಿ ಹಾಗೂ ಗೌರವಯುತವಾಗಿ ಸಮಾಜದಲ್ಲಿ ನೋಡಿಕೊಳ್ಳಬೇಕೆಂವುವುದೇ ಆಶಯವಾಗಿದೆ. ಇಡೀ ಸಮಾಜವನ್ನು ಬದಲಾಯಿಸಬಲ್ಲ ಶಕ್ತಿ ಮಹಿಳೆಯರಿಗಿದೆ. ಇವತ್ತು ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರಗಳಲ್ಲಿ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಮಹಿಳೆಯರು ಮುಂಚೂಣಿಯಲ್ಲಿರುವುದುವ ಉತ್ತಮವಾದ ಬೆಳವಣಿಗೆ ಎಂದರು.
ವೇದಿಕೆಯಲ್ಲಿ ಹಿರಿಯ ನ್ಯಾಯವಾದಿ ಎಸ್.ಎಂ. ದಬಗಾರ, ವಕೀಲರ ಸಂಘದ ಕಾರ್ಯದರ್ಶಿ ಐ.ಸಿ. ನಾಯ್ಕ, ಸಿವಿಲ್ ನ್ಯಾಯಾಲಯದ ಶಿರಸ್ತೇದಾರ ಮಹಾದೇವಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ವಕೀಲರು, ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು, ಪೊಲೀಸ್ ಸಿಬ್ಬಂದಿಗಳು, ಕಕ್ಷಿದಾರರು ಉಪಸ್ಥಿತರಿದ್ದರು. ಮೆಗಾ ಲೋಕ್ ಅದಾಲತಿನಲ್ಲಿ ಚೆಕ್ ಬೌನ್ಸ್ ಪ್ರಕರಣಗಳು, ಎಂ.ವಿ.ಸಿ ಪ್ರಕರಣ, ಮೂಲದಾವಾ ಪ್ರಕರಣಗಳು, ಜನನ-ಮರಣ ಪ್ರಕರಣಗಳು, ಪೊಲೀಸ್ ಪ್ರಕರಣಗಳು ಸೇರಿದಂತೆ ಮೊದಲಾದ ಪ್ರಕರಣಗಳು ಸೇರಿ ಒಟ್ಟು 571 ಪ್ರಕರಣಗಳಲ್ಲಿ 335 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, ರೂ. 12,60,021/- ವಸೂಲಾಗಿರುತ್ತದೆ.